ಕಾಂಗ್ರೆಸ್ ಶಾಸಕ ಬಿ.ನಾರಾಯಣರಾವ್ ನಿಧನಕ್ಕೆ ಸಂತಾಪ ಸೂಚಿಸಿದ ಬಿಜೆಪಿ ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು 



ಬೆಂಗಳೂರು:

ಬಸವಕಲ್ಯಾಣ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ನಾರಾಯಣರಾವ್ ಅವರ ಅಕಾಲಿಕ ನಿಧನಕ್ಕೆ ಬಿಜೆಪಿ ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಸಂತಾಪ ಸೂಚಿಸಿದ್ದು ನಾನು ಒಬ್ಬ ಉತ್ತಮ ಸ್ನೇಹಿತನನ್ನು ಕಳೆದುಕೊಂಡಂತಾಗಿದೆ ಎಂದು ಶೋಕಿಸಿದ್ದಾರೆ.



ಪಕ್ಷ ಬೇರೆಯಾಗಿದ್ದರೂ ಅವರೊಬ್ಬ ವಿಧಾನಸಭೆಯ ಸದಸ್ಯರು. ನಾವೆಲ್ಲ ವಿವಿಧ ವಿಷಯಗಳ ಕುರಿತು ಒಟ್ಟಾಗಿ ಚರ್ಚಿಸುವ ಸೌಹಾರ್ದತೆ ಬೆಳೆಸಿಕೊಂಡಿದ್ದೆವು. ಹಿಂದುಳಿದ ವರ್ಗಗಳ ನಾಯಕ ಎಂದೇ ಖ್ಯಾತರಾಗಿದ್ದ ಅವರು ಎಲ್ಲ ರಾಜಕಾರಣಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು ಪೂರ್ಣ ಅಧಿಕಾರ ಅನುಭವಿಸುವುದಕ್ಕೂ ಮುನ್ನವೇ ಇಹಲೋಕ ತ್ಯಜಿಸಿರುವುದು ವಿಷಾಧ ಪಡುವಂಥದ್ದು ಎಂದು ಅವರು ತಿಳಿಸಿದ್ದಾರೆ. 



ನೇರ, ನಿಷ್ಠುರ ನುಡಿಗೆ ಹೆಸರಾಗಿದ್ದ ಅವರು ಜೀವನದುದ್ದಕ್ಕೂ ಹಿಂದುಳಿದ ವರ್ಗದ ಜನರಿಗಾಗಿಯೇ ಶ್ರಮಿಸಿದ್ದು ರಾಜಕಾರಣಿಗಳಿಗೆ ಮಾದರಿಯಾಗಿದೆ. ಸದನದಲ್ಲಿ ತಮ್ಮ ವಾಕ್ ಚಾತುರ್ಯದಿಂದಲೇ ಎಲ್ಲ ಸಹವರ್ತಿಗಳ ಗಮನ ಸೆಳೆಯುತ್ತಿದ್ದರು. ಡಾ| ಬಿ.ಆರ್.ಅಂಬೇಡ್ಕರ್, ರಾಮಸ್ವಾಮಿ ಪೆರಿಯಾರ್, ಡಿ.ದೇವರಾಜ ಅರಸು ಅವರ ತತ್ವಾದರ್ಶಗಳಿಂದ ಪ್ರೇರಿತರಾಗಿ, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಅವರ ನಿಧನದಿಂದ ರಾಜಕೀಯ ವಲಯಕ್ಕೆ ಸಾಕಷ್ಟು ನಷ್ಟ ಉಂಟಾಗಿದ್ದು ಅವರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬಕ್ಕೆ ಅವರ ಅಗಲಿಕೆಯ ಶಕ್ತಿ ಕರುಣಿಸಲು ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಅವರು ತಿಳಿಸಿದ್ದಾರೆ.


 


 

Be the first to comment

Leave a Reply

Your email address will not be published.


*