ಲಕ್ಷ್ಮಣ ಸವದಿ ಮನೆಗೆ ರಾತ್ರಿ ಡಿಸಿಎಂ ಡಿಕೆಶಿ ಭೇಟಿ: ಸತೀಶ್ ಜಾರಕಿಹೊಳಿ, ಹೆಬ್ಬಾಳ್ಕರ್ ಸಾಥ್

ಅಥಣಿ ಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದರು. ಕೊನೆಗಳಿಗೆಯಲ್ಲಿ ಸಂಪುಟ ಸೇರಲು ಪೈಪೋಟಿ ಹೆಚ್ಚಾಗಿದ್ದರಿಂದ ಅವರನ್ನು ಕೈಬಿಡಲಾಗಿತ್ತು


 

ಬೆಳಗಾವಿ: ಸಚಿವ ಸ್ಥಾನ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದ್ದ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರ ಬೆಳಗಾವಿಯಲ್ಲಿರುವ ಮನೆಗೆ ಕಳೆದ ರಾತ್ರಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ

ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಿಂದ ನೇರವಾಗಿ ಸದಾಶಿವನಗರದ ನಿವಾಸಕ್ಕೆ ಆಗಮಿಸಿದ ಡಿಕೆಶಿ, ಸವದಿ ಅವರನ್ನು ಸಮಾಧಾನಪಡಿಸಿದರು. ಇದೇ ವೇಳೆ, ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ನೀಡುವುದಾಗಿಯೂ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಶಾಸಕ ಬಾಬಾ ಸಾಹೇಬ ಪಾಟೀಲ, ಆಸೀಫ್ ಸೇಠ್, ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಇದ್ದರು. ಮೊದಲ ಬಾರಿಗೆ ಲಕ್ಷ್ಮಣ ಸವದಿ ನಿವಾಸಕ್ಕೆ ಸತೀಶ್ ಜಾರಕಿಹೊಳಿ ಆಗಮಿಸಿದ್ದು ವಿಶೇಷವಾಗಿತ್ತು.

ಇದಕ್ಕೂ ಮುನ್ನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ್ದ ಡಿ.ಕೆ.ಶಿವಕುಮಾರ್, ಕಷ್ಟ ಕಾಲದಲ್ಲಿ ಸವದಿ, ಶೆಟ್ಟರ್ ಅವರು ನಮ್ಮ ಪಕ್ಷಕ್ಕೆ ಬಂದು ನಮಗೆ ಶಕ್ತಿ ತುಂಬಿದ್ದಾರೆ. ವಿಧಾನಸಭೆ ಚುನಾವಣೆ, ಫಲಿತಾಂಶ ನಂತರ ಸರಕಾರ ರಚನೆಯ ಬಿಡುವಿಲ್ಲದ ಕಾರ್ಯಕ್ರಮಗಳ ಕಾರಣದಿಂದ ಅವರನ್ನು ಮಾತನಾಡಿಸಲು ಆಗಿರಲಿಲ್ಲ. ಹೀಗಾಗಿ ಲಕ್ಷ್ಮಣ ಸವದಿ ಮತ್ತು ಜಗದೀಶ್ ಶೆಟ್ಟರ್ ಅವರನ್ನು ಮಾತನಾಡಿಸಲು ಬೆಳಗಾವಿಗೆ ಆಗಮಿಸಿದ್ದೇನೆ ಎಂದು ತಿಳಿಸಿದರು.

ಸವದಿ ಅವರಿಗೆ ಬೇಸರವಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ, ಯಾರಿಗೂ ಬೇಸರವಿಲ್ಲ. ನಾನೊಬ್ಬ ಪಕ್ಷದ ಅಧ್ಯಕ್ಷನಾಗಿ, ಸಿನಿಯರ್ ಲೀಡರ್ ಆಗಿ ಬಂದಿದ್ದೇನೆ. ಲಕ್ಷ್ಮಣ ಸವದಿ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದರು ಎಂಬ ವಿಚಾರ ನನಗೆ ಗೊತ್ತಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಯಾರನ್ನೂ ಕೈ ಬಿಡುವುದಿಲ್ಲ ಅಷ್ಟು ಮಾತ್ರ ಹೇಳುತ್ತೇನೆ. ಯಾವಾಗ, ಏನು ಅಂತಾ ಕೇಳಬೇಡಿ ಎಂದು ಹೇಳಿದರು. ಸವದಿ, ಶೆಟ್ಟರ್ ಅವರಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಅವಕಾಶ ಇದೆಯೇ ಎಂಬ ಪ್ರಶ್ನೆಗೆ, ಕಷ್ಟ ಕಾಲದಲ್ಲಿ ಕೈ ಹಿಡಿದವರನ್ನು ಕಾಂಗ್ರೆಸ್ ಪಕ್ಷ ಕೈ ಹಿಡಿಯುತ್ತದೆ ಎಂದು ಇದೇ ವೇಳೆ ಡಿಕೆಶಿ ಭರವಸೆ ಕೊಟ್ಟರು

ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿ ಪಕ್ಷಕ್ಕೆ ಬಲ ತುಂಬಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ಖಚಿತವೆಂದೇ ಹೇಳಲಾಗಿತ್ತು. ವೀರಶೈವ ಲಿಂಗಾಯತ ಸಮುದಾಯದಿಂದ ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚು ಸಂಖ್ಯೆಯ ಶಾಸಕರು ಸಚಿವ ಹುದ್ದೆಗಾಗಿ ಒತ್ತಡ ಹಾಕಿದ್ದರಿಂದ ಕೊನೆ ಗಳಿಗೆಯಲ್ಲಿ ಹೈಕಮಾಂಡ್​ ಮಟ್ಟದಲ್ಲಿ ಮಾಜಿ ಸಿಎಂ ಜಗದೀಶ್​ ಶೆಟ್ಟರ್, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಹೆಸರನ್ನು ಸಚಿವ ಸಂಪುಟದಿಂದ ಕೈಬಿಡಲಾಯಿತು. ಸಚಿವ ಸ್ಥಾನ ಕೊನೆಗಳಿಗೆಯಲ್ಲಿ ತಪ್ಪಿದ ಕಾರಣಕ್ಕೆ ಸವದಿ ಬೇಸರಗೊಂಡಿದ್ದರು.

ಜಿದ್ದಾಜಿದ್ದಿಯಲ್ಲಿ ಗೆದ್ದಿದ್ದ ಸವದಿ: ತೀವ್ರಜಿದ್ದಾಜಿದ್ದಿಗೆ ಕಾರಣವಾಗಿದ್ದ ಅಥಣಿ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಮಹೇಶ್​ ಕುಮಟಳ್ಳಿ ವಿರುದ್ಧ ಸುಮಾರು 30 ಸಾವಿರ ಮತಗಳ ಅಂತರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಲಕ್ಷ್ಮಣ ಸವದಿ ಭರ್ಜರಿ ಜಯ ಸಾಧಿಸಿದ್ದರು.

Be the first to comment

Leave a Reply

Your email address will not be published.


*