ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸಬಲೀಕರಣದಿಂದ ಜಾತಿ ಪದ್ಧತಿ ದೂರ : ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ

ವರದಿ: ಅಮರೇಶ ಕಾಮನಕೇರಿ


ಜೀಲ್ಲಾ ಸುದ್ದಿಗಳು


ಅಂಬಿಗ ನ್ಯೂಸ್ ಟಿವಿ

ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಸಬಲೀಕರಣವೇ ಜಾತಿ ಪದ್ಧತಿ ನಿರ್ಮೂಲನಾ ಅಸ್ತ್ರಗಳು. ಈ ನಿಟ್ಟಿನಲ್ಲಿ ಜನರು ಸಶಕ್ತರಾದಾಗ ಮಾತ್ರ ಜಾತಿ ವ್ಯವಸ್ಥೆ ಕೊನೆಗೊಳ್ಳುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ನಾಗರಿಕ ಹಕ್ಕು ಸಂರಕ್ಷಣಾ ಅಧಿನಿಯಮ 1955 ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ (ದೌರ್ಜನ್ಯ ಪ್ರತಿಬಂಧ) ಅಧಿನಿಯಮ 1989 ಹಾಗೂ ನಿಯಮಗಳು 1995ರ ಕುರಿತಾಗಿ ನಡೆದ ವಿಚಾರ ಸಂಕಿರಣ ಮತ್ತು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ದೇಶ ಅನೇಕ ರೀತಿಯಲ್ಲಿ ಪ್ರಗತಿ ಸಾಧಿಸಿದ್ದರೂ, ಜಾತಿ ಎಂಬ ಪಿಡುಗು ಇನ್ನೂ ಜೀವಂತವಾಗಿದೆ. ಸಮಾಜದಲ್ಲಿರುವ ಈ ಜಾತಿ ಪದ್ಧತಿಯನ್ನು ನಿರ್ಮೂಲನೆ ಮಾಡಲು, ಪ್ರತಿಯೊಬ್ಬರೂ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಸಶಕ್ತರಾಗಬೇಕಿದೆ. ಜತೆಗೆ ಸಂವಿಧಾನ ನೀಡಿರುವ ಹಕ್ಕುಗಳ ಬಗೆಗೆ ಜಾಗೃತಿ ಮೂಡಿಸುವ ಕೆಲಸಗಳು ಆಗಬೇಕಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಾತಿ ಕಾರಣದಿಂದ ಯಾರಾದರೂ ದಮನಕ್ಕೆ ಒಳಗಾದರೆ ಅದು ಕೇವಲ ಕಾನೂನಿನ ಉಲ್ಲಂಘನೆ ಮಾತ್ರ ಆಗದೇ, ಮಾನವೀಯತೆ ಹಾಗೂ ಸಂವಿಧಾನದ ಉಲ್ಲಂಘನೆಯಾಗುತ್ತದೆ. ಹೀಗಾಗಿ ಈ ಪಿಡುಗನ್ನು ಮೂಲದಿಂದ ತೊಡೆದು ಹಾಕಲು, ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡುವ ಅಂತಃಕರಣದ ಆಲೋಚನೆಯ ಅಗತ್ಯವಿದೆ. ಈ ಯೋಚನೆ ಪ್ರತಿಯೊಬ್ಬರ ಮನಸ್ಸಿನಲ್ಲೂ ಒಡಮೂಡಿದಾಗ ಜಾತಿ ಎಂಬುದೇ ಇಲ್ಲವಾಗಲಿದೆ ಎಂದು ಡಾ.ರವಿ ಹೇಳಿದರು.

ದೌರ್ಜನ್ಯಕ್ಕೊಳಗಾದವರನ್ನು ರಕ್ಷಿಸಲು ಸಂವಿಧಾನ ಅನೇಕ ಹಕ್ಕು, ಅನುಕೂಲ ಹಾಗೂ ಕಾನೂನು ಭದ್ರತೆಯನ್ನು ಒದಗಿಸಿದೆ. ಈ ಕುರಿತ ಕಾನೂನುಗಳ ಬಗ್ಗೆ ಹೆಚ್ಚಿನ ಜಾಗೃತಿ ಹಾಗೂ ಪ್ರಚಾರ ಆಗಬೇಕಿದೆ. ಸಮಸ್ಯೆ ಎದುರಾದಾಗ ಕಾನೂನುಗಳು ನೆರವಿಗೆ ಬರಲಿವೆ. ಆದರೆ ಸಮಸ್ಯೆಗಳೇ ಎದುರಾಗದಂಥಹ ಸಾಮರಸ್ಯ ಸಮಾಜ ನಿರ್ಮಾಣವಾಗಬೇಕೆಂಬ ಆಶಯವನ್ನು ಜಿಲ್ಲಾಧಿಕಾರಿ ಅವರು ವ್ಯಕ್ತಪಡಿಸಿದರು.

ಅಧಿನಿಯಮಗಳ ಕುರಿತು ವಿಚಾರ ಮಂಡಿಸಿದರು. ನಾಗರಿಕ ಹಕ್ಕುಗಳ ಸಂರಕ್ಷಣಾ ಅಧಿನಿಯಮ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ (ದೌರ್ಜನ್ಯ ಪ್ರತಿಬಂಧ) ಅಧಿನಿಯಮಗಳ ಕುರಿತಾದ ಕಿರುಹೊತ್ತಿಗೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಚ್.ಡಿ.ಆನಂದ್ ಕುಮಾರ್, ಆಯೋಜಿತ ನಳಂದ ಬೌದ್ಧ ವಿಶ್ವವಿದ್ಯಾಲಯದ ಬೋಧಿದತ್ತ ಬಂತೇಜಿ, ಉರಿಲಿಂಗಿಪೆದ್ದಿಮಠದ ಪೀಠಾಧ್ಯಕ್ಷರಾದ ಜ್ಞಾನಪ್ರಕಾಶ್ ಸ್ವಾಮೀಜಿ, ವಕೀಲರಾದ ಡಾ.ಎನ್.ಗುರುಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಹೊನ್ನೇಗೌಡ, ಸಹಾಯಕ ನಿರ್ದೇಶಕರಾದ ಚಿಕ್ಕಬಸವಯ್ಯ, ಪ್ರಜಾ ಪರಿವರ್ತನಾ ವೇದಿಕೆಯ ಅಧ್ಯಕ್ಷರಾದ ಸಿ.ಎಂ.ಕೃಷ್ಣಮೂರ್ತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸೇರಿದಂತೆ ಎಲ್ಲಾ ಗಣ್ಯರು ಮಾಲಾರ್ಪಣೆ ಮಾಡಿದರು.

Be the first to comment

Leave a Reply

Your email address will not be published.


*